ಸಿದ್ದಲಿಂಗಯ್ಯನವರು (೩ ಫೆಬ್ರವರಿ ೧೯೫೪ - ೧೧ ಜೂನ್ ೨೦೨೧) ಕನ್ನಡದ ಲೇಖಕರಲ್ಲೊಬ್ಬರು. 'ಬಂಡಾಯ ಸಾಹಿತಿ', 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು. == ಜನನ, ಜೀವನ == ಸಿದ್ಧಲಿಂಗಯ್ಯನವರು ರಾಮನಗರ ಜಿಲ್ಲೆ(ಆಗಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ)ಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಸಿದ್ದಲಿಂಗಯ್ಯನವರಿಗೆ ಹಾಸ್ಯ ಪ್ರಜ್ಞೆ ಇತ್ತು. ʼಗ್ರಾಮ ದೇವತೆಗಳುʼ ಅವರ ಪಿಎಚ್.ಡಿ. ಮಹಾಪ್ರಬಂಧ. ʼಊರು ಕೇರಿʼ ಅವರ ಆತ್ಮಕತೆ. "ಇಕ್ರಲಾ ವದೀರ್ಲಾ", "ದಲಿತರು ಬರುವರು ದಾರಿ ಬಿಡಿ" ಮುಂತಾದ ಹೋರಾಟದ ಗೀತೆಗಳಲ್ಲದೆ "ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ" ಅಂತಹ ಭಾವಗೀತೆಗಳನ್ನೂ, "ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ" ಅಂತಹ ಚಿತ್ರಗೀತೆಗಳನ್ನೂ ಬರೆದಿದ್ದಾರೆ. ಸಿದ್ಧಲಿಂಗಯ್ಯನವರು ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದುದಲ್ಲದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. == ಕೃತಿಗಳು == === ಪಿಎಚ್.ಡಿ. ಸಂಶೋಧನಾ ಪ್ರಬಂಧ === ಗ್ರಾಮ ದೇವತೆಗಳು, ೧೯೯೭ === ಕವನ ಸಂಕಲನಗಳು === ಹೊಲೆ ಮಾದಿಗರ ಹಾಡು, ೧೯೭೫ ಮೆರವಣಿಗೆ, ೨೦೦೦ ಸಾವಿರಾರು ನದಿಗಳು, ೧೯೭೯ ಕಪ್ಪು ಕಾಡಿನ ಹಾಡು, ೧೯೮೩ ಆಯ್ದ ಕವಿತೆಗಳು, ೧೯೯೭ ಅಲ್ಲೆ ಕುಂತವರೆ ನನ್ನ ಜನಗಳು ಮತ್ತು ಇತರ ಕವಿತೆಗಳು, ೨೦೦೫ ಮುಂತಾದ ಅನೇಕವುಗಳನ್ನು ರಚಿಸಿದ್ದಾರೆ === ವಿಮರ್ಶನಾ ಕೃತಿಗಳು === ಹಕ್ಕಿ ನೋಟ, ೧೯೯೧ ರಸಗಳಿಗೆಗಳು ಎಡಬಲ ಉರಿಕಂಡಾಯ, ೨೦೦೯ === ಲೇಖನಗಳ ಸಂಕಲನ === ಅವತಾರಗಳು, ೧೯೯೧ ಜನಸಂಸ್ಕೃತಿ, ೨೦೦೭ === ಭಾಷಣಗಳ ಸಂಕಲನ === ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೧, ೧೯೯೬ ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೨, ೨೦೦೪ === ನಾಟಕಗಳು === ಏಕಲವ್ಯ, ೧೯೮೬ ನೆಲಸಮ, ೧೯೮೦ ಪಂಚಮ, ೧೯೮೦ === ಆತ್ಮಕಥೆ === ಊರುಕೇರಿ- ಭಾಗ-೧, ೧೯೯೭ ಊರುಕೇರಿ- ಭಾಗ-೨, ೨೦೦೬ === ಸಂಪಾದಿತ ಕೃತಿಗಳು === ಸಮಕಾಲೀನ ಕನ್ನಡ ಕವಿತೆ ಭಾಗ-೩,೪ (ಇತರರೊಂದಿಗೆ), ೨೦೦೩ == ಗೌರವ, ಪ್ರಶಸ್ತಿಗಳು == ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-೧೯೮೪ ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-೧೯೮೬ ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -೧೯೯೨ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -೧೯೯೬ ಜಾನಪದ ತಜ್ಞ ಪ್ರಶಸ್ತಿ -೨೦೦೧ ಸಂದೇಶ್ ಪ್ರಶಸ್ತಿ -೨೦೦೧ ಡಾ. ಅಂಬೇಡ್ಕರ್ ಪ್ರಶಸ್ತಿ -೨೦೦೨ ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -೨೦೦೨ ಬಾಬುಜಗಜೀವನರಾಮ್ ಪ್ರಶಸ್ತಿ -೨೦೦೫ ನಾಡೋಜ ಪ್ರಶಸ್ತಿ -೨೦೦೭ ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -೨೦೧೨ ಆಳ್ವಾಸ್ ನುಡಿಸಿರಿ ಪ್ರಶಸ್ತಿ -೨೦೧೨ ನೃಪತುಂಗ ಪ್ರಶಸ್ತಿ -೨೦೧೮ ಪಂಪ ಪ್ರಶಸ್ತಿ - ೨೦೧೯ ಪದ್ಮಶ್ರೀ ಪ್ರಶಸ್ತಿ -೨೦೨೨ == ಸದಸ್ಯತ್ವ, ಅಧ್ಯಕ್ಷತೆ == ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು == ನಿಧನ == ಸಿದ್ದಲಿಂಗಯ್ಯ ಅವರು ೧೧ ಜೂನ್ ೨೦೨೧ರ ಶುಕ್ರವಾರದಂದು ಬೆಂಗಳೂರಿನಲ್ಲಿ ನಿಧನರಾದರು. ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಅವರು ಕೊರೋನೋತ್ತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ೬೭ ವರ್ಷ ವಯಸ್ಸಾಗಿತ್ತು == ಉಲ್ಲೇಖಗಳು ==